ಕಾರವಾರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆರವರು ಕಾರವಾರಕ್ಕೆ ಆಗಮಿಸಿದಾಗ ಕನ್ನಡಪರ ಸಂಘಟನೆ ಹಾಗೂ ಸಾಹಿತಿಗಳೊಂದಿಗೆ ಚರ್ಚೆ ನಡೆಸಿದ್ದು ಈ ವೇಳೆ ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ, ಕಾರವಾರ ಗಡಿ ಪ್ರದೇಶವಾಗಿದ್ದು, ಗೋವಾದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಪುಸ್ತಕಗಳನ್ನು ವಿಸ್ತರಿಸುವಂತೆ ಆಗ್ರಹಿಸಿದರು.
ಕಾರವಾರದ ಗಡಿ ಪ್ರದೇಶದ ಸದಾಶಿವಗಡ ಕೋಟೆ 1715ರಲ್ಲಿ ಸೋಂದಾ ರಾಜವಂಶದ ರಾಜ ಬಸವಲಿಂಗರವರು, ಅವರ ತಂದೆಯವರಾದ ಸದಾಶಿವ ಲಿಂಗರಾಜ್ ಅವರ ಹೆಸರಿನಲ್ಲಿ ಕೋಟೆ ನಿರ್ಮಿಸಿದರು. ಚಿತ್ತಾಕುಲ,ಅಂಗಡಿ, ಕಡವಾಡ, ಅಂಕೋಲಾ ಮತ್ತು ಕರಾವಳಿಯ ಇತರೆ ಭಾಗಗಳಲ್ಲಿ ಹಾಗೂ ಗೋವಾದ ಕಾಣಕೋಣದವರೆಗೂ ರಾಜ್ಯ ವಿಸ್ತರಿಸಿದ್ದರು.
ಅವರ ವಂಶಸ್ಥರು ಗೋವಾದ ಪೋಂಡಾದಲ್ಲಿ ನೆಲೆಸಿದ್ದು, ಅವರಿಗೆ ಕರ್ನಾಟಕದಲ್ಲಿ ಗೌರವಾದರ ನೀಡಿ ಅರಸರ ಇತಿಹಾಸ ಪ್ರಸ್ತುತಪಡಿಸುವ ಮ್ಯೂಸಿಯಂ ಅನ್ನು ಸದಾಶಿವಗಡ ಕೋಟೆಯಲ್ಲಿ ನಿರ್ಮಿಸಬೇಕು. ಕರ್ನಾಟಕದಿಂದ ಗೋವಾಕ್ಕೆ ಉದ್ಯೋಗಕ್ಕಾಗಿ ವಲಸೆ ಹೋದವರು ಕನ್ನಡ ಅಭಿಮಾನದಿಂದ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿದ್ದಾರೆ. ಗೋವಾದಲ್ಲಿ ಸುಮಾರು 15 ಪ್ರಾಥಮಿಕ ಕನ್ನಡ ಶಾಲೆಗಳಿದ್ದು, ಎರಡು ಪ್ರೌಢಶಾಲೆಗಳಿವೆ. ಗೋವಾದ ವಾಸ್ಕೋದಲ್ಲಿ ಸೇರಿದಂತೆ ಎರಡು ಶಾಲೆಯ ಸುಮಾರು 215 ವಿದ್ಯಾರ್ಥಿಗಳು ಪುಸ್ತಕಕ್ಕಾಗಿ ಕಾರವಾರ ಕಾರವಾರ ಶಿಕ್ಷಣ ಇಲಾಖೆಯಲ್ಲಿ ಹಣ ನೀಡಿ ಖರೀದಿಸುತ್ತಿದ್ದಾರೆ. ಹಾಗಾಗಿ ಸರ್ಕಾರದಿಂದ ಉಚಿತ ಪುಸ್ತಕ ಪೂರೈಕೆ ಆಗಬೇಕು ಎಂದು ಅವರು ಗಮನ ಸೆಳೆದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿಳಿಮಲೆ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.