ಅಂಕೋಲಾ: ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ ಹಿನ್ನಲೆ ಉಪವಲಯ ಅರಣ್ಯಾಧಿಕಾರಿಯೊಬ್ಬರು ಓರ್ವ ಮಹಿಳೆ ಸೇರಿದಂತೆ ನಾಲ್ವರ ಮೇಲೆ ದೂರು ದಾಖಲಿಸಿದ್ದಾರೆ.
ಸುಂಕಸಾಳ ಗ್ರಾಮದ ಸಂದೀಪ ಅಶೋಕ ನಾಯ್ಕ, ಸುಬ್ರಾಯ ರಾಮಕೃಷ್ಣ ಭಟ್, ಮಹಾಬಲೇಶ್ವರ ಭಟ್, ದೀಪಾ ಮಹಾಬಲೇಶ್ವರ ಎಂಬುವವರ ಮೇಲೆ ದೂರು ದಾಖಲಾಗಿದೆ. ಮಾಸ್ತಿಕಟ್ಟಾ ಉಪವಲಯ ಅರಣ್ಯಾಧಿಕಾರಿ ಅರುಣ್ ಜೋಸೆಫ್ ನಡಕಟ್ಟಿನ ದೂರು ದಾಖಲಿಸಿದ್ದಾರೆ. ಆರೋಪಿಗಳಾದ ಸುಬ್ರಾಯ ರಾಮಕೃಷ್ಣ ಭಟ್ ಅವರು ತಾಲ್ಲೂಕಿನ ಕಟ್ಟಿನಹಕ್ಕಲ ಗ್ರಾಮದ ಸೊಪ್ಪಿನ ಬೆಟ್ಟದಲ್ಲಿ ಅಕ್ರಮ ಪ್ರವೇಶ ಮಾಡಿ ಪೂರ್ವಾನುಮತಿ ಇಲ್ಲದೆ ಅನಧಿಕೃತ ಕಟ್ಟಡವನ್ನು ಕಟ್ಟಲು ಬುನಾದಿ ಹಾಕಿ ಅರಣ್ಯ ಅತಿಕ್ರಮಣಕ್ಕೆ ಯತ್ನಿಸಿದ್ದರಿಂದ ತೆರವು ಕಾರ್ಯಾಚರಣೆಗೆ ತೆರಳಿದ್ದ ವೇಳೆ ಸಂದೀಪ ನಾಯ್ಕ, ಅರಣ್ಯ ಅಧಿಕಾರಿಗಳ ಸರ್ಕಾರಿ ವಾಹನಕ್ಕೆ ಅಡ್ಡ ಹಾಕಿ ಅತಿಕ್ರಮಣ ಜಾಗಕ್ಕೆ ಹೋಗದಂತೆ ತಡೆದು ನಿಲ್ಲಿಸಿದ್ದಾರೆ. ಅಲ್ಲದೇ ಜೊತೆಯಲ್ಲಿದ್ದ ಚೆನ್ನಪ್ಪ ದೇವಪ್ಪ ಲಮಾಣಿ ಇವರಿಗೆ ಕೂಡ ಆಪಾದಿತ ಮಹಾಬಲೇಶ್ವರ ಭಟ್ ಬೆದರಿಕೆ ಒಡ್ಡಿದ್ದಾರೆ. ತೆರವಿನ ವೇಳೆಗೆ ಕಾರ್ಯಾಚರಣೆ ನಡೆಯದಂತೆ ದೀಪಾ ಮಹಾಬಲೇಶ್ವರ ಭಟ್ ಇವರು ಜೆಸಿಬಿ ಮುಂಭಾಗದಲ್ಲಿ ಕರ್ತವ್ಯಕ್ಕೆ ಅಡ್ಡಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.