ಅಂಕೋಲಾ: ವೃದ್ಧ ತಂದೆ- ತಾಯಿಗೆ ವಂಚನೆ ಮಾಡಿ ಹಣವನ್ನು ಎಗರಿಸಿ ವಾಪಸ್ ಕೇಳಲು ಹೋದಾಗ ಜೀವ ಬೆದರಿಕೆ ಹಾಕಿರುವ ಅಮಾನವೀಯ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಮಗಳು ಮತ್ತು ಅಳಿಯ ಹಾಗೂ ಆತನ ಸಹೋದರಿಯಿಂದ ನಡೆದ ವಂಚನೆಯ ವಿರುದ್ಧ ತಾಯಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಲ್ಲಿನ ತೆಂಕಣಕೇರಿಯ ಶ್ರೀ ಶಂಕರ ನಾರಾಯಣ ರಸ್ತೆಯಲ್ಲಿನ ನಿವಾಸಿ ನಾಗಶ್ರೀ ಸೂರಜ್ ನಾಯ್ಕ, ಆಕೆಯ ಪತಿ ಸೂರಜ್ ಅರವಿಂದ ನಾಯ್ಕ ಹಾಗೂ ಶೀತಲ್ ಅರವಿಂದ ನಾಯ್ಕ ವಿರುದ್ಧ ದೂರು ದಾಖಲಾಗಿದೆ. ತೆಂಕಣಕೇರಿಯ ಬೊಮ್ಮಯ್ಯ ದೇವ ದೇವಸ್ಥಾನದ ಸಮೀಪದ ನಿವಾಸಿ ಗುಲಾಬಿ ಪಾಂಡುರಂಗ ನಾಯ್ಕ ದೂರು ನೀಡಿದ್ದಾರೆ. ನಿವೃತ್ತ ನೌಕರರಾದ ಗುಲಾಬಿ ಪಾಂಡುರಂಗ ನಾಯ್ಕ ಹಾಗೂ ಪಾಂಡುರಂಗ ನಾಯ್ಕ ಇವರಿಗೆ ಮೂವರು ಹೆಣ್ಣು ಮಕ್ಕಳು. ಮೂವರಲ್ಲಿ ನಾಗಶ್ರೀಗೆ ವೃದ್ಧ ಪಾಂಡುರಂಗ ನಾಯ್ಕ ಪತಿಗಳ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣದ ಬಗ್ಗೆ ಮಾಹಿತಿ ಗೊತ್ತಿತ್ತು. ಗುಲಾಬಿ ಅವರ ನಿವೃತ್ತಿಯ ನಂತರ ಬಂದ ಹಣ ಮತ್ತು ಪಿಂಚಣಿ ಹಣ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಜಮಾವಣೆಯಾಗುತ್ತಿತ್ತು. ಅಲ್ಲದೇ ದಂಪತಿಗಳಿಬ್ಬರು ಅಂಕೋಲಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದಾರೆ. 2022ರಲ್ಲಿ ಮಗಳು ನಾಗಶ್ರೀಯನ್ನು ತೆಂಕಣಕೇರಿಯ ಸೂರಜನೊಂದಿಗೆ ಮದುವೆ ಮಾಡಿಸಿದ್ದಾರೆ. ತಾಯಿಯ ಮನೆಯ ಸಮೀಪದಲ್ಲಿ ಮಗಳ ಮನೆ ಇದ್ದುದ್ದರಿಂದ ಸಲುಗೆ ಹೊಂದಿದ್ದರು. 2022ಲ್ಲಿ ಆರೋಪಿತ ಮಗಳು ಮತ್ತು ಅಳಿಯ ದಂಪತಿಗಳನ್ನು ವೃದ್ಧಾಪ್ಯದ ನೆಪವೊಡ್ಡಿ ಉಪಚಾರ ಮಾಡುವ ನಾಟಕವಾಡಿ ಅದೇ ಸಂದರ್ಭದಲ್ಲಿ ಇನ್ನೋರ್ವ ಆರೋಪಿ ಶೀತಲ್ ಪ್ರಚೋದನೆಯಿಂದ ಗುಲಾಬಿ ಅವರ ಮೊಬೈಲ್, ಎಟಿಎಂ ಕಾರ್ಡ್ ಬಳಸಿಕೊಂಡು 2023 ಸೆಪ್ಟೆಂಬರ್ 5ರಂದು 18 ಲಕ್ಷ ರೂಪಾಯಿ, 2023 ಸೆಪ್ಟೆಂಬರ್ 13ರಂದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಿಂದ 79000 ರೂಪಾಯಿ, 2022 ರಿಂದ 2024ರವರೆಗೆ ಎಸ್ ಬಿ ಐ ಖಾತೆಯಿಂದ 806133 ರೂಪಾಯಿ, ಕೆನರಾ ಬ್ಯಾಂಕಿನಿಂದ 6895 ಹಾಗೂ ಗಂಡ ಪಾಂಡುರಂಗ ಅವರ ಖಾತೆಯಿಂದ 1300000 ರೂಪಾಯಿ ಹಣ ತೆಗೆದಿದ್ದು ಖಾತೆಯ ಸ್ಟೇಟ್ಮೆಂಟ್ ಪರಿಶೀಲಿಸಿದಾಗ ಹಣ ತೆಗೆದು ಮೋಸ ಮಾಡಿರುವ ಕುರಿತು ತಿಳಿದು ಬಂದಿದೆ. ಬಗ್ಗೆ ಮಗಳು ಮತ್ತು ಅಳಿಯನಲ್ಲಿ ವಿಚಾರಿಸಿದಾಗ ಹಣವನ್ನು ಎಂದು ವಾಪಸ್ ಕೊಡದೆ ಸತಾಯಿಸಿದ್ದಾರೆ. ಎಪ್ರಿಲ್ 2026ರಲ್ಲಿ ಆರೋಪಿತರಿಬ್ಬರನ್ನು ಕಂಡು ಹಣ ಕೇಳಲು ಹೋದಾಗ ವೃದ್ಧ ದಂಪತಿಗಳಿಗೆ ಹಣ ಕೇಳಿದರೆ ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.