ಶಿರಸಿ: ಸಿದ್ದಾಪುರದ ವೃದ್ಧೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಭಿಜಿತ್ ಮಡಿವಾಳಗೆ ಶಿರಸಿ 1 ನೇ ಸತ್ರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಬಿಎನ್ಎಸ್ 103ರ ಅಡಿಯಲ್ಲಿ ಶಿಕ್ಷೆ ಪ್ರಕಟಗೊಳಿಸಿದ್ದು, 32,000 ರೂ ದಂಡ ಮತ್ತು ಹೆಣ್ಣು ಮಕ್ಕಳಿಗೆ 50,000 ಪರಿಹಾರ ಕೊಡುವಂತೆ ನ್ಯಾಯಾಧೀಶರಾದ ಕಿರಣ್ ಕಿಣಿರವರಿಂದ ಆದೇಶ ಪ್ರಕಟವಾಗಿದೆ. ವೃದ್ಧೆ ಕುಟುಂಬದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗೀಕರ್ ವಾದ ಮಂಡಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಸವಣ್ಣಗಲ್ಲಿಯಲ್ಲಿ ಡಿಸೆಂಬರ್ 25, 2024ರಂದು ಹತ್ಯೆ ನಡೆದಿತ್ತು. ಪಿಗ್ಮಿ ಸಂಗ್ರಾಹಕಿಯಾಗಿದ್ದ ಗೀತಾ ಹುಂಡೇಕರ್ ಕೊಲೆಯಾಗಿತ್ತು. ಅಭಿಜಿತ್ ಮಡಿವಾಳ (30) ವೃದ್ಧೆಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದ. ಕಳ್ಳತನಕ್ಕಾಗಿ ಮನೆಗೆ ನುಗ್ಗಿದ್ದ ಆರೋಪಿ ಕಳ್ಳತನ ನಡೆಸಿ ವೃದ್ಧೆಯನ್ನ ಕೊಲೆಗೈದಿದ್ದ. ವೃದ್ಧೆಯ ಹತ್ತಿರ ಇದ್ದ ಹಣ ಹಾಗೂ ಅವಳ ಕಿವಿ ಓಲೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಮರ್ಡರ್ ನಡೆದು ವಾರದೊಳಗೆ ಆರೋಪಿಯನ್ನ ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.