Flash News
Monday, August 31, 2026
Logo Flash News
Monday, August 31, 2026
Logo

ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭೀಕರ ಅಗ್ನಿ ಅವಘಡ

February 06, 2026   |   Flash News

ಕಾರವಾರ: ನಗರದ ಹೊರವಲಯದ ಶಿರವಾಡದಲ್ಲಿರುವ ಕಾರವಾರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ಬೆಳಗಿನ ಜಾವ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಹಠಾತ್ತನೆ ಕಾಣಿಸಿಕೊಂಡ ಬೆಂಕಿಯು, ಘಟಕದಲ್ಲಿ ರಾಶಿ ಹಾಕಲಾಗಿದ್ದ ಪ್ಲಾಸ್ಟಿಕ್ ಹಾಗೂ ಒಣ ತ್ಯಾಜ್ಯಕ್ಕೆ ಆವರಿಸಿಕೊಂಡಿದ್ದರಿಂದ ಕ್ಷಣಾರ್ಧದಲ್ಲಿ ಇಡೀ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ತುತ್ತಾಯಿತು. ಪ್ಲಾಸ್ಟಿಕ್ ತ್ಯಾಜ್ಯ ಉರಿಯಲಾರಂಭಿಸಿದ ಪರಿಣಾಮ ದಟ್ಟವಾದ ಕಪ್ಪು ಹೊಗೆ ಆವರಿಸಿ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯ ತೀವ್ರತೆಯನ್ನು ಅರಿತ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು. ಬೆಂಕಿಯ ಅಬ್ಬರ ಜೋರಾಗಿದ್ದರಿಂದ ಸ್ಥಳೀಯ ಅಗ್ನಿಶಾಮಕ ವಾಹನಗಳಷ್ಟೇ ಅಲ್ಲದೆ, ನೆರೆಯ ಅಂಕೋಲಾ ಹಾಗೂ ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್‌ನ ಅಗ್ನಿಶಾಮಕ ದಳದ ವಾಹನಗಳನ್ನು ಕೂಡ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಪ್ಲಾಸ್ಟಿಕ್ ತ್ಯಾಜ್ಯದ ಒಳಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅದನ್ನು ಸಂಪೂರ್ಣವಾಗಿ ನಂದಿಸಲು ಸಿಬ್ಬಂದಿಗಳು ಹಗಲಿರುಳು ಹರಸಾಹಸ ಪಡುವಂತಾಯಿತು.

ಮುನ್ನೆಚ್ಚರಿಕಾ ಕ್ರಮವಾಗಿ ನಗರಸಭೆಯ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ನಗರಸಭೆ ಆಯುಕ್ತರಾದ ಜಗದೀಶ್ ಹುಲಗಜ್ಜಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಅಗ್ನಿ ಅವಘಡಕ್ಕೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.