ಜೊಯಿಡಾ: ವಾರಾಂತ್ಯದ ರಜೆ ಕಳೆಯಲು ಅವರು ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಪ್ರಧಾನಿ ಗ್ರಾಮದ ರೆಸಾರ್ಟ್ ಒಂದರಲ್ಲಿ ತಂಗಿದ್ದರು. ದೇಶವು ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಿದ್ಧವಾಗಿದ್ದರೆ ಅವರು ಮಧ್ಯರಾತ್ರಿ ಕ್ಯಾಂಪ್ ಫೈರ್ ಕ್ಷಣಗಳನ್ನು ಸವಿಯುತ್ತಿದ್ದರು. ಜ.26ರ ಮುಂಜಾನೆ 12.30 ರಿಂದ 2 ಗಂಟೆಯ ಒಳಗೆ ದೂರದ ಧಾರವಾಡದ ಮೂಲದ ಗುಂಪು ಜಗಳಕ್ಕೆ ಮುಂದಾಗಿದ್ದು ಘರ್ಷಣೆ ನಡೆಯಿತು. ಘರ್ಷಣೆಯಲ್ಲಿ ದಕ್ಷಿಣ ಕನ್ನಡ ಮೂಲದ ವಿದ್ಯಾರ್ಥಿಗಳನ್ನು ಒಳಗೊಂಡ 9 ಜನರ ಮೇಲೆ, 15-20 ಜನರು ಹಲ್ಲೆ ನಡೆಸಿದರು. ದಕ್ಷಿಣ ಕನ್ನಡದ ಉಜಿರೆಯ ಸನ್ನಿಧಿ ಗಣೇಶ ಹೆಗ್ಗಡೆ, ಕಾರ್ತಿಕ ಸದಾನಂದ ಶೆಟ್ಟಿ, ಸ್ನೇಹಿತಗೌಡ ಗಣೇಶ ಹೆಗ್ಗಡೆ, ಶ್ರವಣ ಜಯಂತ ಹೆಗ್ಗಡೆ, ಕೌಶಿಕ ಶ್ರೀನಿವಾಸ ಗೌಡ, ಕೌಶಿಕ ಶ್ರೀನಿವಾಸ ಪೂಜಾರಿ, ಕಾರ್ತಿಕ ಶ್ರೀನಿವಾಸ ಗೌಡ, ಶ್ವೇತಾ ಜಯರಾಮ ಗೌಡ, ಸುಹಾಸ ಜಯರಾಮ ಗೌಡರ ಮೇಲೆ ಅಪರಿಚಿತ ಗುಂಪು ಹಲ್ಲೆ ನಡೆಸಿತು. ಅಲ್ಲದೇ ಗುಂಪಿನಲ್ಲಿದ್ದ ಯುವತಿಯರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ನೇಹಿತಗೌಡ ದಾಂಡೇಲಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.