ಅಂಕೋಲಾ: ತಾಲ್ಲೂಕಿನಲ್ಲಿ ಕ್ರಿಯಾಶೀಲಾ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ತಹಶೀಲ್ದಾರ್ ಡಾ. ಚಿಕ್ಕಪ ನಾಯಕ ಅಲ್ಪಾವಧಿಯಲ್ಲಿಯೇ ವರ್ಗಾವಣೆಗೊಂಡಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮ ಭವನ ಅಭಿವೃದ್ಧಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಆರೋಗ್ಯ ಶಿಬಿರ, ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ, ಭೂ ದಾಖಲೆಗಳ ಡಿಜಿಟಲೀಕರಣ ಸೇರಿದಂತೆ ಅಲ್ಪಾವಧಿಯಲ್ಲಿಯೇ ಹಲವು ಕಾರ್ಯಗಳ ಮೂಲಕ ಮೆಚ್ಚುಗೆ ಗಳಿಸಿದ್ದರು. ಕಳೆದ ಕೆಲವು ವರ್ಷಗಳಿಂದ ತಾಲ್ಲೂಕಿನ ಪೂರ್ಣಾವಧಿ ತಹಶೀಲ್ದಾರರು ಇಲ್ಲದೇ ಹತ್ತಾರು ಕೆಲಸಗಳು ಅಡ್ಡಗೋಡೆಯ ಮೇಲೆ ದೀಪ ಎನ್ನುವಂತಿರುವಾಗ ಡಾ. ಚಿಕ್ಕಪ್ಪ ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದರು. ಆದರೆ ವರ್ಷದೊಳಗೆ ಅವರ ವರ್ಗಾವಣೆಯಿಂದ ಮತ್ತೆ ತಹಶೀಲ್ದಾರರ ಸ್ಥಾನ ಪ್ರಭಾರಿ ನಿರ್ವಹಣೆಗೆ ಒಳಪಡಲಿದೆ. ವೈದ್ಯಕೀಯ ಅಧಿಕಾರಿಯೂ ಆಗಿ ಸೇವೆ ಸಲ್ಲಿಸಿದ ಡಾ.ಚಿಕ್ಕಪ್ಪ ನಾಯಕ, ತಮ್ಮ ಸ್ವಂತ ಜಿಲ್ಲೆಯಾದ ಬಾಗಲಕೋಟದ ಮುಧೋಳ ತಾಲೂಕಿನ ಗ್ರೇಡ್ -1 ತಹಶೀಲ್ದರರಾಗಿ ವರ್ಗಾವಣೆಗೊಂಡಿದ್ದಾರೆ.