ಕುಮಟಾ: ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ದಾವೆ ಹೂಡಿದ ವಿಚಾರವಾಗಿ ನಡೆದ ಹಲ್ಲೆಯಿಂದ ವ್ಯಕ್ತಿಯೊಬ್ಬರು ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟಿದ್ದಾರೆ. ಸಾವಿಗೆ ಹಲ್ಲೆಯೇ ಕಾರಣವೆಂದು ಮೃತರ ಪುತ್ರಿ ದೂರು ನೀಡಿದ್ದಾರೆ. ತಾಲ್ಲೂಕಿನ ಕೂಜಳ್ಳಿ ಮೆಣಸಿನಕೇರಿಯ ಮಾರುತಿ ಭಿರಾ ಹೆಗಡೆ ಮೃತರು. ಮೇಲಿನ ಕೂಜಳ್ಳಿಯ ನಾಗಪ್ಪ ಜಟ್ಟು ಗೌಡ ಆರೋಪಿತ. ಮಾರುತಿ ಅವರು ಪುತ್ರಿ ದೂರು ನೀಡಿದ್ದು, ಕೆಲವು ವರ್ಷಗಳ ಹಿಂದೆ ಅವರ ಮಾವ ಅನಂತ ಈಶ್ವರ ಹೆಗಡೆ ಒಂದು ಎಕರೆ ಜಮೀನನ್ನು ಆರೋಪಿತ ನಾಗಪ್ಪ ಅವರಿಗೆ ಮಾರಾಟ ಮಾಡಿದ್ದು ಅದೇ ಜಮೀನಿನ ಸಲುವಾಗಿ ಮಾರುತಿ ಹೆಗಡೆ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಇದೇ ವಿಷಯದ ದ್ವೇಷದಿಂದ ಜನವರಿ 17ರಂದು ಮಾರುತಿ ಅವರು ತಮ್ಮ ಮನೆಯ ಎದುರಿದ್ದ ವೇಳೆ ಆರೋಪಿ ನಾಗಪ್ಪ ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ಹೊಟ್ಟೆಗೆ ಬಲವಾಗಿ ಒದ್ದು, ಕಟ್ಟಿಗೆಯಿಂದ ಹೊಟ್ಟೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರುತಿ ಅವರನ್ನು ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುವ ವೇಳೆ ಅವರು ಮೃತಪಟ್ಟಿದ್ದಾರೆ. ನಾಗಪ್ಪ ಅವರು ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ಮಾಡಿದ್ದರಿಂದ ನನ್ನ ತಂದೆ ಮೃತರಾಗಿದ್ದಾರೆ ಎಂದು ಮೃತರ ಪುತ್ರಿ ದೂರಿದ್ದಾರೆ.