ಹೊನ್ನಾವರ: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಸಾಗಿದ್ದು ಕಡಿವಾಣ ಹೇರುವವರು ಕೈಕಟ್ಟಿ ಕುಳಿತುಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಪಸ್ವರಗಳು ತೀವ್ರವಾಗಿವೆ. ಇದರ ಬೆನ್ನಲ್ಲೇ ಹೊಸ ವರ್ಷಕ್ಕೂ ಅಕ್ರಮ ಮರಳುಗಾರಿಕೆ ಮುಂದುವರೆದಿದ್ದು ಹೊನ್ನಾವರದಿಂದ ಅಂಕೋಲಾ ಕಡೆಗೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ವಾಹನ ಒಂದನ್ನು ಕುಮಟಾ ಪೊಲೀಸರು ತಡೆ ಹಿಡಿದು ವಶಕ್ಕೆ ಪಡೆದಿದ್ದಾರೆ.
ಜನವರಿ 2ರಂದು ಮಧ್ಯರಾತ್ರಿ ಕುಮಟಾ ಸಿಪಿಐ ಯೋಗೀಶ್ ತಮ್ಮ ಸಿಬ್ಬಂದಿ ಸಂಜೀವ ನಾಯ್ಕ ಮತ್ತು ಶಿವಾನಂದ ಜಾಡರ ಅವರೊಂದಿಗೆ ಇಲಾಖೆ ಜೀಪ್ ನಲ್ಲಿ ಶಹರದ ಗಸ್ತು ತಿರುಗುವ ವೇಳೆ ಸಂಜೆ ಸುಮಾರು ಏಳು ಗಂಟೆಗೆ ಕುಮಟಾ ಪಟ್ಟಣದ ಗಿಬ್ ಸರ್ಕಲ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಣೆ ಮಾಡುತ್ತಿರುವ ಬಾತ್ಮಿ ಪಡೆದಿದ್ದಾರೆ. ಅರ್ಧ ಗಂಟೆಯಲ್ಲಿ ಸ್ಥಳಕ್ಕೆ ತೆರಳಿ ವಾಹನ ತಪಾಸಣೆ ಮಾಡುವ ವೇಳೆ ಹೊನ್ನಾವರ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ತಡೆ ಹಿಡಿದು ತಪಾಸಣೆ ಮಾಡಿದಾಗ ಮರಳು ತುಂಬಿರುವುದು ಕಂಡು ಬಂದಿದೆ. ಯಲ್ಲಾಪುರ ಮೂಲದ ಗಣಪತಿ ಬೆನಕೆ ವಾಹನವನ್ನು ಚಲಾಯಿಸುತ್ತಿರುವದಾಗಿ ಹಾಗೂ ಅದೇ ತಾಲ್ಲೂಕಿನ ಕಾಳಮ್ಮನಗರದ ರಾಜೇಶ ಕೃಷ್ಣ ನಾಯ್ಕ ಲಾರಿಯ ಮಾಲೀಕ ಎಂದು ಚಾಲಕ ತಿಳಿಸಿದ್ದಾನೆ. ಹೊನ್ನಾವರ ತಾಲೂಕಿನ ಮೂಡ್ಕಣಿ ಹತ್ತಿರ ಶರಾವತಿ ನದಿ ತೀರದಲ್ಲಿ ಮರಳು ತುಂಬಿಸಿಕೊಂಡು ಪರವಾನಿಗೆ ಇಲ್ಲದೆ ಸಾಗಣೆ ಮಾಡುತ್ತಿರುವ ಕುರಿತು ತಿಳಿದು ಬಂದಿದೆ. ಕುಮಟಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಅಕ್ರಮ ಮರಳುಗಾರಿಕೆಯ ಘಟನಾ ಸ್ಥಳವು ಹೊನ್ನಾವರದಲ್ಲಿ ಬರುವುದರಿಂದ ಹೊನ್ನಾವರ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿದೆ.