ಅಂಕೋಲಾ: ಕನ್ನಡ ಭಾಷೆಯ ಮೇಲಿನ ಪ್ರೀತಿ ನಿರಂತರವಾಗಿಬೇಕು. ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡುವ ಮೂಲಕ ಉಳಿಸಿ ಬೆಳಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಕರೀಮ್ ಎಂ ಶೇಖ್ ಹೇಳಿದರು.
ತಾಲ್ಲೂಕಿನ ಪಿ.ಎಂ ಪ್ರೌಢಶಾಲೆಯ ರೈತ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಂಕೋಲಾ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷರು ಗೋಪಾಲಕೃಷ್ಣ ನಾಯಕ(ಕಾಂತ ಮಾಸ್ತರ), ವಿದ್ಯಾರ್ಥಿಗಳು ಜ್ಞಾನವನ್ನು ಸಂಗ್ರಹಿಸಬೇಕು. ಸಂಗ್ರಹಿಸಿದ ಜ್ಞಾನವನ್ನು ಇತರರಿಗೆ ಹಂಚಿದಷ್ಟು ಅದು ವೃದ್ಧಿಯಾಗುತ್ತದ. ಸ್ಪರ್ಧೆಗಳ ಮೂಲಕ ಜ್ಞಾನದ ಪರಿಧಿಯ ವಿಸ್ತರಣೆ ಆಗುತ್ತದೆ. ವಿದ್ಯಾರ್ಥಿಗಳು ನಮ್ಮ ನಾಡು ನುಡಿಯ ಬಗ್ಗೆ ಅಭಿಮಾನ ಆಸಕ್ತಿ ಜ್ಞಾನ ಹೊಂದಬೇಕು ಎಂದರು.
ಅಬ್ದುಲ್ ಕರೀಮ್ ಎಂ ಶೇಖ್ ಅವರು ಸಾಹಿತ್ಯ ಪರಿಷತ್ ಜೊತೆ ನಿಕಟ ಒಡನಾಟ ಹೊಂದಿದ್ದು ಕನ್ನಡವನ್ನು ಬೆಳೆಸೋಣ ಎನ್ನುವ ಅಭಿಲಾಷೆಯೊಂದಿಗೆ ತಮ್ಮ ಮಾತೃಭಾಷೆ ಉರ್ದು ಆಗಿದ್ದರೂ ಈ ಕನ್ನಡ ಕಾರ್ಯಕ್ರಮಕ್ಕೆ ಬಹುಮಾನದ ಪ್ರಾಯೋಜಕತ್ವ ನೀಡಿದ್ದು ಅಭಿನಂದನಾರ್ಹ ಎಂದು ಗೋಪಾಲಕೃಷ್ಣ ನಾಯಕ ಹೇಳಿದರು.
ಮುಖ್ಯ ಶಿಕ್ಷಕ ಚಂದ್ರಶೇಖರ ಕಡೆಮನಿ ಮಾತನಾಡಿ, ಕನ್ನಡ ನುಡಿಯ ಕಂಪನ ಸದಾ ಇರಬೇಕು ಎನ್ನುವ ಆಸೆ ಅಂಕೋಲಾ ಸಾಹಿತ್ಯ ಪರಿಷತ್ ಘಟಕದ್ದು. 2020ರಿಂದ ಕಸಾಪದಿಂದ ಅಂಕೋಲಾದಲ್ಲಿ ವಿನೂತನ ಕಾರ್ಯಕ್ರಮಗಳು ಆಯೋಜನೆಯಾಗಿ ಕನ್ನಡವನ್ನು ಕಟ್ಟುವ ಪುಣ್ಯದ ಕೆಲಸವಾಗುತ್ತಿದೆ ಎಂದರು.
ಎನ್.ಸಿ.ಸಿ ಕಮಾಂಡರ್ ಮತ್ತು ಕಸಾಪದ ಗೌರವ ಕಾರ್ಯದರ್ಶಿ ಜಿ.ಆರ್ ತಾಂಡೇಲ್ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಶಿಕ್ಷಕ ಜಿ ಎಸ್ ನಾಯ್ಕ ವಂದಿಸಿದರು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ದೆಯಲ್ಲಿ ಮೇಧಶ್ರೀ ಜಿ ತಾಂಡೇಲ್, ಸಾನಿಕಾ ಎಂ ನಾಯ್ಕ ಪ್ರಥಮ, ವಾರುಣಿ ಡಿ ಅಲಗೇರಿ ದ್ವಿತೀಯ, ವೈಭವಿ ವಿ ಗೌಡ ತೃತೀಯ ಮತ್ತು ವಿಸ್ಮಯ ವಿ ನಾಯ್ಕ ಸಮಾಧಾನಕರ ಹಾಗೂ ಆಂಗ್ಲ ಮಾಧ್ಯಮದಲ್ಲಿ ಅಭಿಷೇಕ ಎಸ್ ಪ್ರಥಮ, ಶ್ರಾವಣ್ಯ ಕುಮಟೆಕರ ದ್ವಿತೀಯ, ವರ್ಷಾ ನಾಯ್ಕ ತೃತೀಯ ಬಹುಮಾನ ಪಡೆದರು.