ಕಾರವಾರ: ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ವೈದ್ಯಕೀಯ ಅಧೀಕ್ಷಕರಾಗಿ ಏಕಕಾಲದಲ್ಲಿ ಒಂದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಆಡಳಿತಾತ್ಮಕ ಕಾರಣಗಳಿಂದ ವಿವಾದಗಳಿಗೆ ಸಿಲುಕಿಕೊಂಡು ನಂತರ ಲಂಚ ಪಡೆದ ಆರೋಪದ ಮೇಲೆ ಅಮಾನತುಗೊಂಡ ಡಾ. ಶಿವಾನಂದ ಕುಡ್ತರ್ಕರ್ ಅವರನ್ನು ಕುಮಟಾ ತಾಲೂಕು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ನಿಯುಕ್ತಿಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕಳೆದ ಜುಲೈ 16ರಂದು ಡಾ. ಶಿವಾನಂದ ಕುಡ್ತರ್ಕರ್ ಆಸ್ಪತ್ರೆಗಳ ಬೆಡ್ ಮತ್ತಿತರ ಪರಿಕರಗಳ ೂರೈಕೆಯ ಟೆಂಡರ್ನಲ್ಲಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಅಮಾನತ್ತುಗೊಂಡಿದ್ದರು. ಇದೀಗ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಕಾಯ್ದೆ ಮತ್ತು ನಿಯಮ 2025 ರ ಅನ್ವಯ ಸಮಾಲೋಚನೆಯಲ್ಲಿ ಆಯ್ಕೆ ಮಾಡಿಕೊಂಡ ಅನ್ವಯ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತು ವಿಕಂಡನಗೊಳಿಸಿ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಡಾ. ಶಿವಾನಂದ ಕುಡ್ತರ್ಕರ್ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾಗಿ ನಡೆಸಿದ ಆಡಳಿತ ವೈಖರಿಗೆ ಹಲವಾರು ಬಾರಿ ಖಂಡನೆ ಮತ್ತು ದೂರುಗಳನ್ನು ಎದುರಿಸಿದ್ದರು. ಅಮಾನತ್ತು ಅವಧಿಯಲ್ಲಿಯೂ ಕಾನೂನು ಬಾಹಿರವಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ದೂರುಗಳು ಸಹ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಕುಮಟಾ ಆಸ್ಪತ್ರೆಯ ತಾಲೂಕು ಆಡಳಿತ ವೈದ್ಯಾಧಿಕಾರಿ ಹುದ್ದೆಗೆ ಅವರು ದೊಡ್ಡವರ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ವದಂತಿ ಕೂಡ ಹಬ್ಬಿದೆ.