ಗೋಕರ್ಣ: ಗೋಕರ್ಣ ಸಮೀಪದ ಮೂಡಂಗಿ ಗ್ರಾಮದ ಸಾಣೆಕಟ್ಟಿಗೆ ಹೋಗುವ ರಸ್ತೆಯಲ್ಲಿನ ಖಾರ್ಲ್ಯಾಂಡ್ ಬಳಿಯ ಖುಲ್ಲಾ ಜಾಗದಲ್ಲಿ ನಾಲ್ವರು ಇಸ್ಪೀಟ್ ಎಲೆಗಳನ್ನು ಬಳಸಿ ಕಾನೂನುಬಾಹಿರ ಅಂದರ್ ಬಾಹರ್ ಆಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿನ ಸಾಣಿಕಟ್ಟಾದ ಶ್ರೀಧರ ನಾಯ್ಕ್, ಮೂಡಂಗಿಯ ಸಂದೀಪ ಹರಿಕಂತ್ರ, ದೇವಪ್ಪ ಹರಿಕಂತ್ರ ಮತ್ತು ಸೋಮೇಶ್ವರ ಹರಿಕಂತ್ರ ಆಟದಲ್ಲಿ ಮಗ್ನರಾಗಿದ್ದರು. ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ತಾಡಪತ್ರ ಹಾಗೂ ಜೂಜಾಟಕ್ಕೆ ಕಟ್ಟಿದ ಹಣದ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.