ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಬಳಿಯಿದ್ದ ಏಳು ಮೊಬೈಲ್ ಗಳನ್ನು ಜೈಲು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೈಲು ಅಧಿಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಕೆಲವು ದಿನಗಳ ಹಿಂದೆ ಉತ್ತಕನ್ನಡ ಜಿಲ್ಲಾ ಜೈಲಿನಲ್ಲಿ ಕೈದಿಗಳಿಂದ ಗಲಾಟೆ ನಡೆದಿತ್ತು. ಗಾಂಜಾ ಕೊಡಲಿಲ್ಲ ಎನ್ನುವ ಕಾರಣಕ್ಕೆ ಜೈಲು ಅಧಿಕಾರಿಗಳ ಮೇಲೆ ಕೈದಿಗಳು ದಾಳಿ ಮಾಡಿದ್ದರು. ಮತ್ತೊಂದು ಪ್ರಕರಣದಲ್ಲಿ ಜೈಲಿನ ಟಿವಿಯನ್ನ ಒಡೆದುಹಾಕಿದ್ದರು. ಈ ಘಟನೆಯೂ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದರು. ಅದರ ಭಾಗವಾಗಿ ಮೊಬೈಲ್ ಮತ್ತಿತರ ಕಾನೂನು ಬಾಹಿರ ವಸ್ತುಗಳ ಸಂಗ್ರಹದ ಬಗ್ಗೆ ನಡೆದಿತ್ತು. ತಪಾಸಣೆ ವೇಳೆ ಏಳು ಮೊಬೈಲ್ ಹಾಗೂ ಚಾರ್ಜರ್ ಪತ್ತೆಯಾಗಿದೆ. ಈ ಸಂಭಂದ ಕಾರವಾರ ನಗರ ಠಾಣೆಗೆ ಜೈಲು ಅಧಿಕಾರಿಗಳು ದೂರಿದ್ದಾರೆ. ಈ ಮೊಬೈಲ್ ಫೋನ್ ಗಳು ಯಾವ ಕೈದಿಗಳಿಗೆ ಸಂಬಂಧಿಸಿದ್ದು ಹಾಗೂ ಇದನ್ನು ಪೂರೈಕೆ ಮಾಡಲು ಸಹಕರಿಸಿದ್ದು ಯಾರು? ಎನ್ನುವ ಕುರಿತು ತನಿಖೆಯಿಂದ ತಿಳಿದು ಬರಬೇಕಿದೆ.