ಶಿರಸಿ: ಏಳು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರೂ ಸಮಾಧಾನವಾಗಿ ಆಡಳಿತ ನಡೆಸಲು ಸಿದ್ದರಾಮಯ್ಯ ಕಲಿತುಕೊಂಡಿಲ್ಲ. ಜನಾದೇಶವನ್ನು ಉಪಯೋಗಿಸಿಕೊಳ್ಳುವ ಬದಲು ಉದ್ದಟತನವನ್ನು ಮಾಡುತ್ತಿದ್ದಾರೆ. ಭಾಗ್ಯ ಭಾಗ್ಯ ಎನ್ನುತ್ತೀರಿ, ನಿಮ್ಮ ಭಾಗ್ಯ ಏನಾಗಿದೆ? ನಡುವಳಿಕೆ ಏನಾಗಿದೆ ಈಗ? ಎಂದು ಕೇಂದ್ರ ಸಚಿವ ವಿ ಸೋಮಣ್ಣ ಕಿಡಿ ಕಾರಿದ್ದಾರೆ.
ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ, ಸಿದ್ದರಾಮಯ್ಯನವರ ಕಾರ್ಯವೈಕರಿ ನೋಡಿದರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಎನಿಸುತ್ತಿದೆ. ರಾಜ್ಯ ಸರ್ಕಾರದ ಹಳಿ ತಪ್ಪಿದೆ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಅಂಟಿಕೊಂಡಿದ್ದಾರೆ ಎನ್ನುತ್ತಾ ಹಳ್ಳಿಯ ಗಾದೆಯೊಂದನ್ನು ಉದಾಹರಣೆ ನೀಡಿದ ಅವರು ಪ್ರಧಾನಿ ಮೋದಿ ಅವರ ಆಡಳಿತವನ್ನು ನೋಡಿ ಕಲಿತುಕೊಳ್ಳಿ. ಸಂಸ್ಕಾರ, ಸಂಸ್ಕೃತಿ ಇಲ್ಲದ ಆಡಳಿತಕ್ಕೆ ಇನ್ನೊಂದು ಹೆಸರೇ ಸಿದ್ದರಾಮಯ್ಯ ಸರ್ಕಾರ ಎಂದು ಸರ್ಕಾರವನ್ನು ತಿವಿದರು.
ಇದೇ ವೇಳೆ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ಕುರಿತು ಮಾತನಾಡಿದ ಅವರು, ಹುಬ್ಬಳ್ಳಿ ಅಂಕೋಲಾ- ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊಕದ್ದಮೆ ಅನ್ವಯ ಏನು ಮಾಡಬೇಕು ಎನ್ನುವುದನ್ನು ತೀರ್ಮಾನಿಸಲಾಗುತ್ತದೆ. ಈ ಯೋಜನೆಗೆ ಒಟ್ಟಾರೆ 2530 ಎಕರೆ ಭೂಮಿಯ ಅಗತ್ಯವಿದೆ. ರೈಲ್ವೆ ಮತ್ತು ರಸ್ತೆಯನ್ನು ಒಟ್ಟಿಗೆ ಕೊಂಡೊಯ್ಯುವ ಬಗ್ಗೆ ಚಿಂತನೆ ಇದೆ. ಇದು ಯಾರ ಸಹಭಾಗಿತ್ವವಿಲ್ಲದೆ ಕೇಂದ್ರ ಸರ್ಕಾರದ ಅನುದಾನದಲ್ಲಿಯೇ ನಡೆಯುತ್ತದೆ. ತಾಳಗುಪ್ಪ-ಹುಬ್ಬಳ್ಳಿ ನೂತನ ಮಾರ್ಗಕ್ಕೆ 3115 ಕೋಟಿ, ತಾಳಗುಪ್ಪ-ಹೊನ್ನಾವರ ಮಾರ್ಗಕ್ಕೆ 1500 ಕೋಟಿ ಮತ್ತು ಕರಾವಳಿ ಕೊಂಕಣ ಪ್ರಯಾಣಿಕರ ಸ್ನೇಹ ಸೌಲಭ್ಯಕ್ಕೆ 300 ಕೋಟಿ ಅನುದಾನ ಕಲ್ಪಿಸಲಾಗಿದೆ ಎಂದರು.