ಅಂಕೋಲಾ: ಕಾಲೇಜು ವಿದ್ಯಾರ್ಥಿಯೊಬ್ಬನ ಸೈಕಲ್ಲನ್ನು ಹಾಡುಹಗಲೇ ಕದ್ದೊಯ್ದ ಆರೋಪಿಯನ್ನು ಅರ್ಧಗಂಟೆಯಲ್ಲಿಯೇ ಇಲ್ಲಿನ ಪೊಲೀಸರು ಪತ್ತೆಹಚ್ಚಿ ವಷಕ್ಕೆ ಪಡೆದಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ಗೋಡೆಯ ಪಕ್ಕದಲ್ಲಿ ಕಾಳಮ್ಮ ದೇವಸ್ಥಾನದ ಎದುರು ನಿಲ್ಲಿಸಿದ್ದ ವಿದ್ಯಾರ್ಥಿಯ ಸೈಕಲ್ ಶುಕ್ರವಾರ ಮಧ್ಯಾಹ್ನ ಸುಮಾರು 12.30ಕ್ಕೆ ನಾಪತ್ತೆಯಾಗಿರುವುದು ಕಂಡುಬಂದಿತ್ತು. ಅಲ್ಲಿಯೇ ಹುಡುಕಾಡಿ ಸೈಕಲ್ ಪತ್ತೆಯಾಗದ ಹಿನ್ನೆಲೆ ಆತಂಕಗೊಂಡ ವಿದ್ಯಾರ್ಥಿ ಕಾಲೇಜು ಉಪನ್ಯಾಸಕರ ಬಳಿ ಅಹವಾಲು ಹೇಳಿದ್ದರು. ಪೊಲೀಸರನ್ನು ಸಂಪರ್ಕಿಸಿದ ಉಪನ್ಯಾಸಕರು ಕಳ್ಳತನವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಇದೇ ವೇಳೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಮಾರ್ಗದಲ್ಲಿ ಅಪರಿಚಿತನಂತೆ ಸೈಕಲ್ ಹೊಡೆದುಕೊಂಡು ಒಬ್ಬ ವ್ಯಕ್ತಿ ತೆರಳಿರುವುದನ್ನು ಇತರ ವಿದ್ಯಾರ್ಥಿಗಳು ಗಮನಿಸಿದ್ದರು. ಅದರ ಮಾಹಿತಿಯನ್ನು ಪಡೆದ ಪೊಲೀಸ್ ಸಿಬ್ಬಂದಿ ಶೇಖರ ಸಿದ್ದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕಾರ್ಯಾಚರಣೆಗೆ ಇಳಿದಿದ್ದರು. ವಿದ್ಯಾರ್ಥಿಗಳ ಹೇಳಿಕೆಯಂತೆ ಕೇಸರಿ ಬಣ್ಣದ ಟೀ ಶರ್ಟ್ ಧರಿಸಿದ ವ್ಯಕ್ತಿ ಪಟ್ಟಣದ ಮಾರ್ಗವೊಂದರಲ್ಲಿ ಕದ್ದ ಸೈಕಲ್ ಮೇಲೆ ಸವಾರಿ ಮಾಡುತ್ತಿರುವುದು ಕಂಡುಬಂತು. ತಕ್ಷಣ ಅವನನ್ನು ವಿಚಾರಿಸಿ ಸೈಕಲ್ ಸಮೇತ ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಬಸವರಾಜ್ ಸಂಗಪ್ಪ ಉತ್ಕನ್ನವರ ಸೈಕಲ್ ಕದ್ದ ಆರೋಪಿ ಎನ್ನಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಬಡ ವಿದ್ಯಾರ್ಥಿಯ ಸೈಕಲ್ ಪತ್ತೆ ಹಚ್ಚುವಲ್ಲಿ ಕ್ಷಿಪ್ರವಾಗಿ ಕಾರ್ಯಚರಣೆ ನಡೆಸಿದ ಪೊಲೀಸ್ ಸಿಬ್ಬಂದಿ ಶೇಖರ್ ಸಿದ್ದಿಗೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ವೃಂದ ಮೆಚ್ಚುಗೆ ವ್ಯಕ್ತಪಡಿಸಿದೆ.