ಕುಮಟಾ: ಮದುವೆಯ ಮುಹೂರ್ತಕ್ಕಿಂತ ಪೂರ್ವದಲ್ಲಿಯೇ 250 ಗ್ರಾಂ ಚಿನ್ನ, 15 ಲಕ್ಷ ರೂಪಾಯಿ ನಗದು ಮತ್ತು ಕಾರು ಖರೀದಿಗೆ 6 ಲಕ್ಷ ರೂಪಾಯಿ ಹಣ ಪಡೆದುಕೊಂಡರು ಮಾನಸಿಕ ಹಿಂಸೆ ನೀಡುತ್ತಿದ್ದ ಆರೋಪದಡಿಯಲ್ಲಿ ವಿವಾಹಿತೆಯೋರ್ವರು ಗಂಡನ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾರೆ.
ಇಲ್ಲಿನ ಚಿತ್ರಗಿಯ ಗಜಾನನ ನಾಯ್ಕ, ಜಟ್ಟಿ ನಾಯ್ಕ, ಬೀರಮ್ಮ ನಾಯ್ಕ, ಜ್ಯೋತಿ ನಾಯ್ಕ, ವನಿತಾ ನಾಯ್ಕ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ಅಖಿಲ ನಾಗೇಶ ನಾಯ್ಕ ದೂರು ದಾಖಲಿಸಿದ್ದಾರೆ. ಚಿತ್ರಗಿಯ ಗಜಾನನ ನಾಯ್ಕ ಅವರೊಂದಿಗೆ ಮದುವೆಯಾಗಲು ವನ್ನಳ್ಳಿಯ ಬಂಧುಗಳ ಮನೆಯಲ್ಲಿ ಮಾತುಕತೆ ನಡೆಸಿ 24 ಫೆಬ್ರವರಿ 2023ರಂದು ಬಾಡದ ಸಿಲ್ವರ್ ಸ್ಯಾಂಡ್ ರೆಸಾರ್ಟಿನಲ್ಲಿ ನಿಶ್ಚಿತಾರ್ಥ ನಡೆಸಿ ಆ ಅವಧಿಯಲ್ಲಿ ಗಜಾನನ ನಾಯ್ಕ ತಂದೆ ಜಟ್ಟಿ, ತಾಯಿ ಬೀರಮ್ಮ ಅಕ್ಕಂದಿರಾದ ಚಂದ್ರಕಲಾ ಮತ್ತು ವನಿತಾ ಸೇರಿಕೊಂಡು ಒಳ್ಳೆಯ ಕಾರು ಮತ್ತು ಅದ್ದೂರಿಯಾಗಿ ಮದುವೆ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. 22 ಮಾರ್ಚ್ 2023 ರಂದು ಕುಮಟಾದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಮದುವೆಯಾಗಿದ್ದು, ಮದುವೆ ಮುಹೂರ್ತದ ಪೂರ್ವದಲ್ಲಿ ಬೇಡಿಕೆ ಇಟ್ಟ 250 ಗ್ರಾಂ ಬಂಗಾರದ ಆಭರಣಗಳು, 15ಲಕ್ಷ ನಗದು ಮತ್ತು ಕಾರು ಖರೀದಿಗೆ ಹಿರಿಯರ ಸಮ್ಮುಖದಲ್ಲಿ ಹಣ ಪಡೆದುಕೊಂಡಿದ್ದಾರೆ. ನಂತರ ಆರೋಪಿತರು ಸೇರಿಕೊಂಡು ಮಾನಸಿಕ ಹಿಂಸೆ ನೀಡಿ ಗಂಡನೊಂದಿಗೆ ಯಾವುದೇ ರೀತಿಯ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಅಖಿಲ ಅವರು ದೂರಿದ್ದಾರೆ.