ಕಾರವಾರ :ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮೀನುಗಾರ ಯುವಕನೋರ್ವ ದುರಂತವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಮಾಜಾಳಿ ದಾಂಡೇಭಾಗದ ನಿವಾಸಿ 24 ವರ್ಷದ ಅಕ್ಷಯ ಅನಿಲ ಮಾಜಾಳಿಕರ್ ಮೃತ ದುರ್ದೈವಿ. ಅಕ್ಟೋಬರ್ 14ರಂದು ಮೀನು ಹಿಡಿಯಲು ಅಕ್ಷಯ ತೆರಳಿದ್ದ. ಸಮುದ್ರದಲ್ಲಿ ಮೀನು ಹಿಡಿಯುವ ವೇಳೆ ಕಾಂಡಿ ಮೀನೊಂದು ಹಾರಿ ಹೊಟ್ಟೆಯ ಕೆಳಭಾಗಕ್ಕೆ ಚುಚ್ಚಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಅಕ್ಷಯನಿಗೆ ಗಾಯದ ಸ್ಥಳದಲ್ಲಿ ಹೊಲಿಗೆ ಹಾಕಿದ ವೈದ್ಯರು ನಂತರ ಡಿಸ್ಟಾರ್ಜ್ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ
ಗುರುವಾರ ಬೆಳಿಗ್ಗೆ ಅಕ್ಷಯ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಅಕ್ಷಯ ಉತ್ತಮ ಕ್ರೀಡಾಪಟುವಾಗಿದ್ದು, ಆತನ ಸಾವಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು, ಸ್ನೇಹಿತರು ದುಃಖ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಶಾಸಕ ಸತೀಶ್ ಸೈಲ್ ಹಾಗೂ ವಿಧಾನಪರಿಷತ್ ಶಾಸಕ ಗಣಪತಿ ಉಳ್ವೆಕರ್ ಭೇಟಿ ನೀಡಿದ್ದಾರೆ.