ಅಂಕೋಲಾ: ಬೇಲೆಕೇರಿ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ಹಾನಿಗೊಂಡಿದೆ. ಸರಸ್ವತಿ ಅಶೋಕ ಬಾನಾವಳಿಕರ ಎಂಬುವವರ ಮಾಲೀಕತ್ವದ ಶ್ರೀ ಶಾರದಾಂಬ ಪರ್ಸಿನ್ ಬೋಟ್ ಮುಳುಗಡೆಯಾಗಿದೆ. ಮಧ್ಯರಾತ್ರಿ ಅಲೆಗಳ ರಭಸಕ್ಕೆ ನೀರು ತುಂಬಿಕೊಂಡು ಸಮುದ್ರದೊಳಗೆ ಸಂಪೂರ್ಣವಾಗಿ ಬೋಟ್ ಮುಳುಗಿದೆ. ಮುಳುಗಡೆಯಿಂದ ಲಕ್ಷಾಂತರ ರೂಪಾಯಿ ಹಾನಿ ಸಾಧ್ಯತೆ ಅಂದಾಜಿಸಲಾಗಿದೆ. ಬಂದರಿನಲ್ಲಿ ಸೂಕ್ತ ಅಲೆತಡೆಗೋಡೆ ಇಲ್ಲದ ಕಾರಣ ಜೋರಾದ ಅಲೆಗಳಿಂದ ಮೀನುಗಾರಿಕಾ ಬೋಟ್ ಗಳು ನಿರಂತರವಾಗಿ ಹಾನಿಗೆ ಒಳಗಾಗುತ್ತಿವೆ. ಘಟನಾ ಸ್ಥಳಕ್ಕೆ ಪೊಲೀಸ್, ಕರಾವಳಿ ಕಾವಲು ಪಡೆ ಮತ್ತು ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ತೆರಳಿದ್ದು ಕ್ರೇನ್ ಮೂಲಕ ಬೋಟ್ ಮೇಲೆತ್ತಲು ಕಾರ್ಯಾಚರಣೆ ನಡೆಯುತ್ತಿದೆ. ಬೋಟ್ ನ ಯಂತ್ರೋಪಕರಣಗಳು, ಮೀನುಗಾರಿಕೆ ಬಲೆಗಳು ಹಾಗೂ ಇತರೆ ಸಲಕರಣೆಗಳು ಹಾನಿಗೊಂಡಿರುವ ಸಾಧ್ಯತೆಗಳಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.