ಅಂಕೋಲಾ: ಹೆದ್ದಾರಿಯಂಚಿಗೆ ಡಾಂಬರು ಮಡುವಿನಲ್ಲಿ ಸಿಲುಕಿಕೊಂಡು ಜೀವಭಯದಲ್ಲಿದ್ದ ಹೆಬ್ಬಾವೊಂದನ್ನು ಉರಗತಜ್ಞರು ಮತ್ತು ಅರಣ್ಯ ಇಲಾಖೆಯ ಸಹಾಯದಿಂದ ರಕ್ಷಿಸಿ ತಾಲ್ಲೂಕಿನ ಪಶುವೈದ್ಯ ಆಸ್ಪತ್ರೆಯಲ್ಲಿ ಡಾಂಬರು ಬಿಡಿಸಿ ಜೀವ ಉಳಿಸುವ ಕಾರ್ಯ ನಡಿಯುತ್ತಿದೆ. ತಾಲೂಕಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಅಡ್ಲೂರು ಬಳಿ ಸೆ.12 ರಂದು ಡಾಂಬರು ತುಂಬಿದ ಬೃಹತ್ ಲಾರಿಯೊಂದು ಪಲ್ಟಿಯಾಗಿ ಸೋರಿಕೆಯಾಗಿತ್ತು. ಉರಗತಜ್ಞರ ಪ್ರಕಾರ ಈ ವೇಳೆಯಲ್ಲಿಯೇ ಸಂಚರಿಸುತ್ತಿದ್ದ ಹೆಬ್ಬಾವು ಡಾಂಬರು ಮಡುವಿನಲ್ಲಿ ಸಿಲುಕಿಕೊಂಡಿದ್ದು ಕ್ರಮೇಣವಾಗಿ ಒಣಗುತ್ತಾ ಬಂದಂತೆ ಮೇಣದಂತೆ ಹೆಬ್ಬಾವಿನ ಚರ್ಮಕ್ಕೆ ಅಂಟಿಕೊಂಡು ಸಂಚಾರ ಮತ್ತು ಚಯಾಪಚಯ ಕ್ರಿಯೆಗೆ ಅಡ್ಡಿ ಉಂಟು ಮಾಡಿತ್ತು. ಜೀವಭಯದಲ್ಲಿದ್ದ ಹೆಬ್ಬಾವನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಉರಗತಜ್ಞ ಮಹೇಶ ನಾಯಕ ಅವರ ಗಮನಕ್ಕೆ ತಂದಿದ್ದಾರೆ. ಮಹೇಶ ನಾಯಕ ಮತ್ತು ಅವರ ಮಗ ಗಗನ ನಾಯಕ ಹೆಬ್ಬಾವನ್ನು ಅರಣ್ಯ ಇಲಾಖೆ ಸಹಾಯದಿಂದ ಹಿಡಿದು ತಾಲೂಕಿನ ಪಶು ವೈದ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದಾರೆ. ಮುಖ್ಯ ಪಶು ವೈದ್ಯಕೀಯ ಅಧಿಕಾರಿ ಅಭಿಷೇಕ್ ಎಟಿ ಮತ್ತು ಪಶು ವೈದ್ಯಕೀಯ ಅಧಿಕಾರಿ ಪ್ರಶಾಂತ್ ನೇತೃತ್ವದಲ್ಲಿ ಡಾಂಬರು ಬಿಡಿಸಿ ಹೆಬ್ಬಾವನ್ನು ಸಂರಕ್ಷಿಸುವ ಕೆಲಸ ನಡೆಯುತ್ತಿದೆ. ಉರಗ ತಜ್ಞ ಮಹೇಶ ನಾಯಕ ಸ್ಥಳದಲ್ಲಿದ್ದು ಅಗತ್ಯ ಸಲಹೆಗಳನ್ನು ನೀಡಿ ಸಂಪೂರ್ಣ ಡಾಂಬರನ್ನು ಬೇರ್ಪಡಿಸಿ ಹೆಬ್ಬಾವನ್ನು ಕಾಡಿಗೆ ಸುರಕ್ಷಿತವಾಗಿ ಬಿಡುವಂತೆ ಕ್ರಮ ವಹಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಚಂದ್ರಶೇಖರ್ ಮತ್ತು ಮಂಜು ಸಹಕಾರ ನೀಡುತ್ತಿದ್ದಾರೆ. ಆಕಸ್ಮಿಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯಿಂದ ತನ್ನಷ್ಟಕ್ಕೆ ತಾನು ತೆರಳುತ್ತಿದ್ದ ಹೆಬ್ಬಾವು ಡಾಂಬರಿನಲ್ಲಿ ಸಿಲುಕಿಕೊಂಡಿದ್ದು, ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ.