ಅಂಕೋಲಾ: ನಾಗರಿಕರ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯಕ್ಕೆ ಅಂಕೋಲಾ ತಾಲೂಕಿನ ಶಿಕ್ಷಕರನ್ನು ಕಾರವಾರ ತಾಲೂಕಿಗೆ ನಿಯೋಜನೆ ಮಾಡಿರುವುದನ್ನು ರದ್ದುಪಡಿಸುವಂತೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಾಲ್ಲೂಕಿನ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಯಾವುದೇ ಕಾರಣಕ್ಕೂ ತಾವು ಈ ರೀತಿಯ ಅವೈಜ್ಞಾನಿಕ ನಿಯೋಜನೆಗೆ ನಾವು ಸ್ಪಂದನೆ ನೀಡುವುದಿಲ್ಲ. ಸರ್ಕಾರ ತಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಶಿಕ್ಷಕರ ಮನವಿಯಲ್ಲಿ ತಿಳಿಸಿದೆ.
ಕರ್ನಾಟಕ ಸರಕಾರವು ಹಮ್ಮಿಕೊಂಡ ನಾಗರಿಕರ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯಕ್ಕೆ ಅವರ್ಸಾ ಹಾಗೂ ಭಾವಿಕೇರಿ ಕ್ಲಸ್ಟರ್ ವ್ಯಾಪ್ತಿಯ 77 ಶಿಕ್ಷಕರನ್ನು ಹಾಗೂ ತಾಲೂಕಿನ ಇಬ್ಬರು ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ಕಾರವಾರ ತಾಲೂಕಿಗೆ ನಿಯೋಜಿಸಿದ್ದು ಸಮಂಜಸವಾಗಿರುವುದಿಲ್ಲ. ಇದರಿಂದ ಅಪರಿಚಿತವಾದ ಪ್ರದೇಶದಲ್ಲಿ ಶೇಕಡಾ 80ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವ ಅವರ್ಸಾ ಹಾಗೂ ಭಾವಿಕೇರಿ ಕ್ಲಸ್ಟರ್ ವ್ಯಾಪ್ತಿಯ ಮಹಿಳಾ ಶಿಕ್ಷಕಿಯರು ಗಣತಿ ಕಾರ್ಯ ನಿರ್ವಹಿಸಬೇಕಾಗಿರುವುದು ತುಂಬಾ ಸಮಸ್ಯೆಯಾಗಿರುತ್ತದೆ. ಈ ಸಮೀಕ್ಷೆಗೆ ನಿಯೋಜಿಸಿದ ಬಹುತೇಕ ಶಿಕ್ಷಕ-ಶಿಕ್ಷಕಿಯರು ಮಧ್ಯ ವಯಸ್ಸು ದಾಟಿದವರಾಗಿದ್ದಾರೆ. ಅಲ್ಲದೇ ಅವರ್ಸಾ ಹಾಗೂ ಭಾವಿಕೇರಿ ವ್ಯಾಪ್ತಿಯ ಪ್ರದೇಶಗಳನ್ನು ತಾಲೂಕಿನ ಬೇರೆ ಬೇರೆ ಶಿಕ್ಷಕರು ಗಣತಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದರಿಂದ ಅಂಕೋಲೆಯ ಶಿಕ್ಷಕ ವಲಯದಲ್ಲಿ ತುಂಬಾ ಗೊಂದಲಮಯ ವಾತಾವರಣ ಸೃಷ್ಟಿಯಾಗಿದ್ದು, ಶಿಕ್ಷಕರು ಆತಂಕದಲ್ಲಿದ್ದಾರೆ. ದಯವಿಟ್ಟು ಅಂಕೋಲೆಯ ಎಲ್ಲಾ ಶಿಕ್ಷಕರಿಗೆ ಅವರ ಕಾರ್ಯಕ್ಷೇತ್ರದಲ್ಲಿಯೇ ಗಣತಿ ಕಾರ್ಯವನ್ನು ನಿರ್ವಹಿಸಲು ಅನುಕೂಲ ಮಾಡಿಕೊಟ್ಟು ತಾಲೂಕಿನ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕಾಗಿ ಶಿಕ್ಷಕರ ಮನವಿಯಲ್ಲಿ ತಿಳಿಸಿದೆ